Saturday, December 10, 2011

ಗೀತಾ ಜಯಂತಿ


ಗೀತಾ ಜಯಂತಿ
(ಲೇ: ಬಿ.ಎಸ್. ಚಂದ್ರಶೇಖರ ಸಾಗರ. ೧೯೯೯ಡಿಸೆಂಬರ್ ನಲ್ಲಿ ನಡೆಯುವ ಗೀತಾ ಜಯಂತಿಯ ಸಂದರ್ಭದಲ್ಲಿ ಸಾಗರ ವಾರ ಪತ್ರಿಕೆ ಸಾಗರ ಇದಕ್ಕೆ ಮಿತ್ರ ಶ್ರೀ ಶ್ರೀನಿವಾಸ ಉಡುಪರ ಒತ್ತಾಸೆಯ ಮೇಲೆ ಬರೆದ ಲೇಖನ. ೨೭/೧೨/೯೯-//೨೦೦೦ದ ಸಂಚಿಕೆಯಲ್ಲಿ ಪ್ರಕಟಿತ. ಕಂ||ಗೆ ಹಾಕಿದ ದಿನ ೧೧-೦೪-೨೦೧೦.)
ಮಹಾತ್ಮರು ಹುಟ್ಟಿದ ದಿನವನ್ನು ಜಯಂತಿ ಎಂದು ಆಚರಿಸುವಂತೆ [[ಭಗವದ್ಗೀತೆ]] ಯು ಹುಟ್ಟಿದ ದಿನವನ್ನು ಗೀತಾ ಜಯಂತಿ ಎಂದು ಆಚರಿಸುತ್ತಾರೆ. ಇದೇ ಡಿಸೆಂಬರ್ ಹದಿನೆಂಟರಂದು (೧೯೯೯) ಗೀತಾ ಜಯಂತಿಯು ಆಚರಿಲ್ಪಡುವುದು. ಮಾರ್ಗಶಿರ ಮಾಸದ ಶುಕ್ಲ ದಶಮಿ ಮತ್ತು ಏಕಾದಶಿ ಸೇರಿದ ದಿನ, ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನೆಂಬುದು ನಂಬುಗೆ. ಅಂದು, ಪಾಂಡವರಿಗೂ ಕೌರವರಿಗೂ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದ ಆರಂಭದ ದಿನ. ದಿನದ ಬಗ್ಗೆ ಸ್ವಲ್ಪ ವಿವಾದವಿದ್ದಂತೆ ಕಾಣುವುದು. ಮಹಾಭಾರತದಲ್ಲಿ, ಮಾರ್ಗಶಿರ ತ್ರಯೋದಶಿ ಮತ್ತು ಚತುರ್ದಶಿ ಸೇರಿದ ದಿನದಂದು ಯುದ್ಧವು ಆರಂಭವಾಯಿತೆಂದು ಹೇಳಿದೆ. ಹದಿನೆಂಟು ದಿನ ಯುದ್ಧ ನಡೆದು ಅದೇ ಮಾರ್ಗಶಿರ ಅಮಾವಾಸ್ಯೆಯಂದು ದುರ್ಯೋಧನನ ವಧೆಯಾಗುವುದು. ಜಯದ್ರಥನ ವಧೆ ಹರಿನಾಲ್ಕನೆಯ ದಿನ ಆಯಿತು. ಅಂದು ಕೃಷ್ಣನ ಮಾಯೆಯಿಂದ ಸೂರ್ಯನು ಸ್ವಲ್ಪ ಹೊತ್ತು ಮರೆಯಾಗಿ ನಂತರ ಪನಃ ಸಂಜೆ ಸೂರ್ಯನು ಪುನಃ ಕಾಣಿಸಿಕೊಂಡಾಗ, ಅರ್ಜುನನು ಜಯದ್ರಥನನ್ನು ಕೊಂದನೆಂದು ಹೇಳಿದೆ. ಕೆಲವರು ಅಂದು ಖಾಗ್ರಾಸ ಸೂರ್ಯ ಗ್ರಹಣ ವಾಗಿರಬಹುದೆಂದು ಊಹಿಸುತ್ತಾರೆ. ಹಾಗಿದ್ದರೆ ಅಂದು ಅಮಾವಾಸ್ಯೆಯಾಗಿರಬೇಕು; ಹಾಗಿದ್ದರೆ ಕುರುಕ್ಷೇತ್ರ ಯುದ್ಧವು ಮಾರ್ಗಶಿರ ಬಹುಳ ಬಿದಿಗೆಯಂದು ಆರಂಭವಾಗಿ ಅಂದೇ ಗೀತೋಪದೇಶವಾಗಿರಬೇಕು. ಆದರೆ ಮಾರ್ಗಶರ ಶುದ್ಧ ದಶಮಿ/ ಏಕಾದಶಿಯಂದು ಗೀತಾಜಯಂತಿಯನ್ನು ಆಚರಿಸುವ ಪದ್ದತಿ ಹೇಗೆ ಬಂದಿತೆಂಬುದು ಸಂಶೋಧಕರಿಗೆ ಬಿಟ್ಟ ವಿಷಯ.
ಭಗವದ್ಗೀತೆಯು ನಮ್ಮ ಪಂಚಾಂಗಗಳ ಪ್ರಕಾರ ಕಲಿಯುಗಾದಿ ಲೆಕ್ಕದಲ್ಲಿ ೫೧೦೦ ವರ್ಷಗಳ ಹಿಂದೆ ನಡೆದ ಉಪದೇಶ. ಇತಿಹಾಸ ಸಂಶೋಧಕರು ಇದನ್ನು ೩೫೦೦ ವರ್ಷಗಳಷ್ಟು ಹಿಂದೆ ನೆಡೆದದ್ದೆಂದು ಸಾಧಿಸುತ್ತಾರೆ.
ಭಗವದ್ಗೀತೆಯ ಬೋಧನೆಯ ಸನ್ನಿವೇಶವು ಬಹಳ ವಿಚಿತ್ರವಾಗಿದೆ. ಒಂದು ಕಡೆ ಪಾಂಡವರ ಏಳು ಅಕ್ಷೋಹಿಣಿ ಸೇನೆ ; ಎದುರಿಗೆ ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ. ಇವೆರಡರ ಮದ್ಯೆ ಅರ್ಜುನನ ರಥ; ಶ್ರೀಕೃಷ್ಣ ಸಾರಥಿ. ಘಟ್ಟದಲ್ಲಿ ಅರ್ಜುನನಿಗೆ ಬಂಧುಗಳನ್ನು ಕೊಲ್ಲಬೇಕಾದ ದುಗುಡ. ಬಂಧು ಬಾಂಧವರನ್ನು ಕೊಂದು ಪಡೆವ ರಾಜ್ಯವೇ ಬೇಡ; ಭಿಕ್ಷ ಬೇಡಿ ಜೀವಿಸುವುದೇ ಲೇಸು ಎಂಬ ಭಾವನೆ. ಸಂದಿಗ್ಧ ಸ್ಥಿತಿಯಲ್ಲಿದ್ದ ಅರ್ಜನ ಶ್ರೀ ಕೃಷ್ಣನನ್ನು ಕುರಿತು, ನಾನು ನಿನ್ನ ಶಿಷ್ಯ , ಯುದ್ಧ ಮಾಡುವುದೋ ಬಿಡುವುದೋ, ಧರ್ಮಸಂಕಟದಲ್ಲಿದ್ದೇನೆ, ಯಾವುದು ಶ್ರೇಯಸ್ಸು ? ನಿಶ್ಚಿತವಾಗಿ ಹೇಳು. ಎಂದ. ಶ್ರೀ ಕೃಷ್ಣನನ್ನು ಗೀತೋಪದೇಶದ ಸಂದರ್ಭದಲ್ಲಿ ಮಾತ್ರ ಭಗವಂತನು ಹೇಳಿದನು ಎಂದಿದೆ. ಅದರಿಂದಲೇ ಶ್ರೀ ಕ್ರಷ್ನನು ಅರ್ಜುನನಿಗೆ ಉಪದೇಶ ಮಾಡಿದ ಗೀತಾ ರೂಪದಲ್ಲಿರುವ ಸಂಭಾಷಣೆಗಳು ಭಗವದ್ಗೀತೆ ಎಂದು ಹೆಸರಾಗಿದೆ.
ಭಗವದ್ಗೀತೆಯು ಹದಿನೆಂಟು ಅಧ್ಯಾಯಗಳಿಂದ ಕೂಡಿದ್ದರೂ, ಶ್ರೀಕೃಷ್ಣನ ಉಪದೇಶ, ಎರಡನೆಯ ಅಧ್ಯಾಯದ ಹನ್ನೊಂದನೇ ಶ್ಲೋಕದಿಂದ ಆರಂಭವಾಗಿದೆ. ಮುಂದೆ ಅದೇ ಅಧ್ಯಾಯದ ಐವತ್ಮೂರನೇ ಶ್ಲೋಕದವರೆಗೆ, ಎಂದರೆ ನಲವತ್ಮೂರು ಶ್ಲೋಕಗಳಲ್ಲಿ ಅರ್ಜುನನಿಗೆ ಹೇಳಬೇಕಾದುದನ್ನೆಲ್ಲಾ ಹೇಳಿಯಾಯಿತು. ಆದರೆ ಸಂದೇಹ ನಿವಾರನೆಗಾಗಿ , ಅವನ ಪ್ರಶ್ನೆ ಗಳಿಗೆ ಉತ್ತರ ರೂಪವಾಗಿ ಉಳಿದ ಆರುನೂರು ಶ್ಲೋಕಗಳು ಬಂದಿವೆ. ಅರ್ಜುನನ ವಿಷಾದದ ಸಂದರ್ಭದ ಶ್ಲೋಕಗಳೂ ಸೇರಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಒಟ್ಟು ಏಳು ನೂರು ಶ್ಲೋಕಗಳಾಗತ್ತವೆ.
ಯುದ್ಧಾರಂಭ ಸಮಯದಲ್ಲಿ ಏಳು ನೂರು ಶ್ಲೋಕಗಳನ್ನು ಹೇಳಿದ್ದುಂಟೇ? ಎಂಬ ಸಂಶಯ ಮೊದಲಿನಿಂದಲೂ ಇದೆ. ಸ್ವಾಮಿ ಆದಿದೇವಾನಂದರು, ತಮ್ಮ ಗೀತಾ ಪೀಠಿಕೆಯಲ್ಲಿ ಶ್ರೀ ಕೃಷ್ಣನು ಸಂಕ್ಷೇಪಿಸಿ ಹೇಳಿದುದನ್ನು ವ್ಯಾಸರು ವಿವರವಾಗಿ ಬರೆದಿರಬಹುದೆಂದು ಹೇಳುತ್ತಾರೆ. ಪ್ರಾಚೀನ ಪ್ರಸಿದ್ಧ ಟೀಕಕಾರರಾದ ಶ್ರೀಧರ ಸ್ವಾಮಿಯವರೂ ಇದೇ ಅಭಿಪ್ರಾಯ ಪಡುತ್ತಾರೆಂದು ಹೇಳಿದ್ದಾರೆ. ಭಗವಂತನ ಸ್ವರೂಪರಾದ ವ್ಯಾಸರು ಮಹಾಭಾರತದ ಸಾರವನ್ನು ಗೀತೆಯಲ್ಲಿ ತುಂಬಿರುವರೆಂದು ವಿನೋಬಾರ ಅಭಿಪ್ರಾಯ. ಶ್ರೀಶಂಕರರು ಶ್ರೀಮನ್ನಾರಾಯಣನೇ ಶ್ರೀ ಕೃಷ್ನನಾಗಿ ಅವತರಿಸಿ, ಜಗತ್ತಿನಲ್ಲಿ ಬ್ರಹ್ಮಜ್ಞಾನ ಪ್ರಚಾರಮಾಡಲು ಮತ್ತು ಅರ್ಜುನನ ಮೋಹವನ್ನು ಕಳೆಯಲು ಮಾಡಿದ ಉಪದೇಶವನ್ನು , ಸರ್ವಜ್ಞರಾದ ವೇದವ್ಯಾಸರು ಭಗವಂತನು ಹೇಳಿದಂತೆಯೇ ಏಳುನೂರು ಶ್ಲೋಕಗಳಲ್ಲಿ ಗೀತೆಯನ್ನು ರಚಿಸಿದರೆನ್ನುತ್ತಾರೆ.
ಗೀತೆ ಚಿಕ್ಕದಾದರೂ ಹಿಂದೂ ಧರ್ಮದ ಮಹಾ ಗ್ರಂಥವೆಂದು ಹೆಸರು ಪಡೆದಿದೆ. ಅದನ್ನು ಉಪನಿಷತ್ತುಗಳ ಸಾರವೆಂದು ಹೇಳುತ್ತಾರೆ.ಅದರಲ್ಲಿ ಅನೇಕ ಬಗೆಯ ಯೋಗ ಗಳನ್ನು ಹೇಳಿದ್ದರೂ, ಅದರಲ್ಲಿ ಹೇಳಿದ ಕರ್ಮಯೋಗ, ಜ್ಞಾನಯೋಗಗಳೇ ಬಹಳ ಪ್ರಸಿದ್ಧವಾಗಿವೆ.
ಅದನ್ನು ಅರ್ಥ ಮಾಡಿಕೊಳ್ಳುವುದು ಸಮುದ್ರದಿಂದ ಬೊಗಸೆ ನಿರನ್ನು ತಂದಂತೆ. ಆದನ್ನು ಓದಿದವರು, ಅನುಷ್ಠಾನ ಮಾಡುವವರು ಗೀತೆಯನ್ನು ಪೂರ್ಣ ಅರಿತಿದ್ದೇವೆಂದು ಹೇಳುವಂತಿಲ್ಲ. ಇದನ್ನು ಕೇಳಿದ ಮಾತ್ರದಿಂದ ಅರಿಯಲಾರರು, ಎಂಬುದು ಅದರಲ್ಲಿರವ ಎಚ್ಚರಿಕೆ. ಅದರಲ್ಲಿರುವ ಎಲ್ಲಾ ಉಪದೇಶಗಳೂ ಎಲ್ಲರಿಗೂ ಅನ್ವಯಿಸಲಾರದೆಂದು ನನ್ನ ಭಾವನೆ. ಅವರವರ ಗುಣ ಸ್ವಭಾವ, ನಂಬುಗೆಗಳಿಗೆ ತಕ್ಕಂತೆ ಬೇಕಾದ ಯೋಗ ವನ್ಮ್ನ ಆರಿಸಿಕೊಳ್ಳಬಹ್ಮದು. ಸದ್ಧರ್ವ್ಮದ ದುಡಿಮೆಯುಳ್ಳ ಸಜ್ಜನಿಕೆಯ ಪರೋಪಕಾರಿ ಗೃಹಸ್ಥ ಜೀವನ, ಕರ್ಮಯೋಗದ ಆದರ್ಶ ಜೇವನ ವಾಗಬಹುದೆಂದು ನನ್ನ ಭಾವನೆ. ಮಹಾನ್ ಗ್ರಂಥವನ್ನು ಪ್ರತಿಯೊಬ್ಬರೂ ಒಮ್ಮೆಯಾದರೂ ಓದಬೇಕು. ಕಾಲ ಧರ್ಮಕ್ಕನುಸರಿಸಿ ತಮಗೆ ಬೇಕಾದದ್ದನ್ನು ಆಯ್ದುಕೊಳ್ಳಬಹುದು. ಅದರಲ್ಲಿರುವ ಸರ್ವಕಾಲಿಕ ಸತ್ಯಗಳು ಮಾನವರೆಲ್ಲರಿಗೂ ಅನ್ವಯವಾಗುವಂತಿವೆ.
ಓಂ ತತ್ ಸತ್

No comments:

Post a Comment