Friday, December 16, 2011

ಈಶೋಪನಿಷತ್



(The Universe - Photo compiled by Hubble Telescope by Nasa scientists)
ಈಶಾವಾಸ್ಯೋಪನಿಶತ್
(ಕನ್ನಡ ಭಾವಾನುವಾದ ಮತ್ತು ವ್ಯಾಖ್ಯಾನ : ಬಿ ಎಸ್. ಚಂದ್ರಶೇಖರ ಸಾಗರ ; ೨೨-೯-೨೦೦೯/2-1-2012)

              ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು ಉಪನಿಷತ್ತುಗಳು ವೇದದ ಅಂಗಗಳಾದ ಬ್ರಾಹ್ಮಣ, ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ ಈಶಾವಾಸ್ಯೋಪನಿಷತ್ತು ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು.  ಅದಕ್ಕೆ ಈಶೋಪನಿಷತ್ತು ಎಂಬ ಹೆಸರೂ ಇದೆ.  ಅದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ.  ಭಗವದ್ಗೀತೆ  ಇದರ ವಿಸ್ತಾರವೆಂಬ ಅಭಿಪ್ರಾಯವಿದೆ.  ಈಮಂತ್ರಗಳನ್ನು ನನ್ನ  ಅರಿವಿಗೆ ಸಾಧ್ಯವಾದಷ್ಟು ಕನ್ನಡದಲ್ಲಿ ಕೊಡುವ ಪ್ರಯತ್ನ ಮಾಡಿದ್ದೇನೆ.
            ವೇದಾಂತ, ಉಪನಿಷತ್ತುಗಳು ಈ ಜಗತ್ತನ್ನು ನಿರಾಕರಿಸುತ್ತವೆ ಮತ್ತು ಕೇವಲ ಮೋಕ್ಷ , ಪರಲೋಕ ಪರವಾದದ್ದೆಂಬ ಭಾವನೆ ಇದೆ.  ಸಂನ್ಯಾಸಿಗಳಾದವರು ವ್ಯಾಖ್ಯಾನಇವಕ್ಕೆ ವ್ಯಾಖ್ಯಾನ ಟೀಕೆ ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ ಸಾಧನೆಗೇಒತ್ತು ಕೊಟ್ಟು ಇಹ ಸಾಧನೆಗೆ ಅಗತ್ಯವಾದ ಕಾಯಕಕ್ಕೆ  ಪ್ರಾಧಾನ್ಯತೆ ಕೊಡದಿರುವದು ಕಂಡುಬರುವುದು; ಅದು ಸ್ವಾಭಾವಿಕವೂ ಹೌದು.  ಆದರೆ ಉಪನಿಷತ್ತಿನ ಸಾಮಾನ್ಯ -ಸರಳ ಅರ್ಥವನ್ನು ನೋಡುವಾಗ ಕಾಯಕಕ್ಕೂ ಪ್ರಾಮುಖ್ಯತೆ ಕೊಟ್ಟಿರುವುದು ಕಾಣುತ್ತದೆ. ನಾನು ಉಪನಿಷತ್ ಮಂತ್ರಗಳ ಸಾಮಾನ್ಯ -ಸರಳ ಅರ್ಥವನ್ನೇ ಪರಿಗಣಿಸಿರುತ್ತೇನೆ.  ಅದು ಗೃಹಸ್ಥರಾದಿಯಾಗಿ ಎಲ್ಲರಿಗೂ ಇಹ ಪರ ಸಾಧಕವಾಗಿರುವುದೆಂದು ನನ್ನ ನಂಬುಗೆ. ಕಾಯಕ, ಸೇವೆ, ಮೋಕ್ಷ ಸಾಧನೆಗಳಲ್ಲಿ  ಸಮಾನವಾಗಿ ತೊಡಗಿದ್ದ ಮಹಾತ್ಮಾ ಗಾಂಧೀಜೀಯವರ ತತ್ವ - ಸಿದ್ಧಾಂತಗಳಿಗೂ ಹೊಂದಾಣಿಕೆ ಯಾಗವುದು.

ಶಾಂತಿ ಮಂತ್ರ : ಓಂ ಪೂರ್ಣಮದಃ ಪೂರ್ಣಮಿದಂ
                     ಪೂರ್ಣಾತ್ಪೂರ್ಣಮುದಚ್ಯತೇ |
              ಪೂರ್ಣಸ್ಯ ಪೂರ್ಣಮಾದಾಯ
                     ಪೂರ್ಣಮೇವಾವಶಿಷ್ಯತೇ ||
              ಓಂ ಶಾಂತಿಃ ಶಾಂತಿಃ ಶಾಂತಿಃ

ಕನ್ನಡ ;      ಓಂ, ಅದುಪೂರ್ಣ-ವಿದು ಪೂರ್ಣ
                     ಪೂರ್ಣದಿಂ ಪೂರ್ಣ ಹುಟ್ಟಿಹುದು |
              ಕಳೆ ಪೂರ್ಣದಿಂ ಪೂರ್ಣವನು
                     ಪೂರ್ಣವೇ ತಾನುಳಿಯುವುದು ||
              ಓಂ  ಶಾಂತಿಃ  ಶಾಂತಿಃ  ಶಾಂತಿಃ ||
(ಅದು ಪೂರ್ಣವು + ಇದು ಪೂರ್ಣಪೂರ್ಣದಿಂದ ಪೂರ್ಣ ಹುಟ್ಟಿದೆ.  ಪೂರ್ಣದಿಂದ ಪೂರ್ಣವನ್ನು ಕಳೆ, ಪೂರ್ಣವೇ ಉಳಿಯುವುದು:   ಸೂತ್ರ : ಪೂರ್ಣ + ಪೂರ್ಣ =ಪೂರ್ಣಪೂರ್ಣ- ಪೂರ್ಣ = ಪೂರ್ಣ)
      
                 ಇದು  ಆಧುನಿಕ ಗಣಿತ ಸೂತ್ರದಂತೆ ತೋರುವುದು.
(೦+೦=೦,೦-೦=೦ ಅಥವಾ ಅನಂತ). ಪಾಶ್ಚಿಮಾತ್ಯಜಗತ್ತಿಗೆ  ಗಣಿತದಲ್ಲಿ ಸೊನ್ನೆಯ ಕಲ್ಪನೆ ಬಂದದ್ದು ಸುಮಾರು ಒಂದು ಸಾವಿರ ವರ್ಷದ ಹಿಂದೆ. ಸುಮಾರು ಐದು ಸಾವಿರ ವರ್ಷದ ಹಿಂದಿನ ಈ ಮಂತ್ರದಲ್ಲಿ ಈ ಅಮೂರ್ತ ಸೂತ್ರ ಒಂದು ವಿಸ್ಮಯ.

        ಆದರೆ ಇದು ಮೋಕ್ಷ ಶಾಸ್ತ್ರದ ಪೀಠಿಕೆ. ಅದಕ್ಕೆ ತಾತ್ವಿಕ  ಅರ್ಥವೇ ಸರಿ.  ಪರಮಾತ್ಮ ತತ್ವವು ಪರಿಪೂರ್ಣ. ಅದರಿಂದ ಹುಟ್ಟಿದ ಈ ಜಗತ್ತೂ ಪರಿಪೂರ್ಣ.  ಆದರೆ ಅದು ಹುಟ್ಟಿದ್ದರಿಂದ ಅಧಿಕವಾಗಿಲ್ಲ. ಈ ಜಗತ್ತು ಲಯವಾದರೂ ಒಟ್ಟು ಆ ಪರಮಾತ್ಮ ತತ್ವದಲ್ಲಿ ಕಡಿಮೆಯಾಗದು. 
ಇದು ತತ್ವ ಸಾರ.  ಈ ತತ್ವ ದಾರ್ಶನಿಕ ಋಷಿಯ  ಅನುಭವವಾದ್ದರಿಂದ ತರ್ಕಕ್ಕೆ ನಿಲುಕದು.  ಆದರೂ ತತ್ವ ಶಾಸ್ತ್ರವು ಸಾಮಾನ್ಯರ ತಿಳುವಳಿಕೆಗಾಗಿ ತರ್ಕವನ್ನು ಅವಲಂಬಿಸಿದೆ. (ಉದಾ :  ಕನಸಿನಲ್ಲಿ ಸಂತೆಗೆ ಹೋದವನು  ಎಚ್ಚರಾದಾಗ ತಾನೊಬ್ಬನೇ ಇರುವುದನ್ನು ಕಾಣುತ್ತಾನೆ -ಕನಸು ಕಾಣುವಾಗ ಅನೇಕ ಜನರಿದ್ದರೂ ಹೆಚ್ಚೂ ಇಲ್ಲ, ಕನಸು ಲಯವಾದಾಗ ಆ ಜನರೆಲ್ಲಾಮಾಯವಾದರೂ ಕಡಿಮೆಯಾಗಲೂ ಇಲ್ಲ.).
 ಈ ಶಾಂತಿ ಮಂತ್ರದಲ್ಲಿ ಈ ಉಪನಿಷತ್ತಿನ ಸಾರವನ್ನೇ ಹೇಳಿದಂತಿದೆ.



 ಮಂತ್ರ ೧ : ಹರಿಃ ಓಂ |
              ಈಶಾವಾಸ್ಯಮಿದಂ(ಗ್ಂ) ಸರ್ವಂ
                     ಯತ್ಕಿಂಚ ಜಗತ್ಯಾಂ ಜಗತ್ |
              ತೇನ ತ್ಯಕ್ತೇನ ಭುಂಜೀಥಾಃ
                     ಮಾ ಗೃಧಃ  ಕಸ್ಯಸ್ವಿದ್ಧನಂ ||

 ಪದ್ಯ  ೧ : ಓಂ ಹರಿಗೆ ನಮವು |
              ಈಶ ಭಾವದಿಂ ಮುಚ್ಚು ಮನದಿಂದೆಲ್ಲವನು
                     ಕಣವಿರಲಿ, ಜಗವಿರಲಿ ; ಅದರಿಂದೆ - |
              ಕೊಟ್ಟು ತಾನುಣಬೇಕುಅತಿಯಾಸೆ ಒಳಿತಲ್ಲ,
                     ಬಿಟ್ಟು ಹೋಗುವ ಸಂಪದವು ನಮದಲ್ಲ ||
(ಈಶ ಭಾವದಿಂದ ಮುಚ್ಚು ಮನದಿಂದ + ಎಲ್ಲವನು, ಕಣವು +ಇರಲಿ- ಕಣವೇ ಆಗಿರಲಿ; ಜಗವು+ಇರಲಿ - ಜಗವೇ ಆಗಿರಲಿ; ಅದರಿಂದೆ- ಆದ್ದರಿಂದ ಕೊಟ್ಟು ತಾನು ಉಣ್ಣಬೇಕು; ಆತಿ ಆಸೆ ಒಳಿತು ಅಲ್ಲಬಿಟ್ಟು ಹೋಗುವ ಸಂಪತ್ತು ನಮ್ಮದು ಅಲ್ಲ.)

          ಸರ್ವಾಂತರ್ಯಾಮಿಯಾದ ಜಗದೊಡೆಯ ಭಗವಂತನ ನೆನಪು ಸದಾ ಇರಬೇಕು. ( ಈಶ ಭಾವದಿಂದ ಈ ಜಗತ್ತನ್ನು ಮುಚ್ಚಬೇಕು ಎಂಬುದು      ಶ್ರೀ ಶಂಕರರ ಅರ್ಥ: ಈಜಗತ್ತಿನ ಕಣದಿಂದ ಹಿಡಿದು ಎಲ್ಲದರಲ್ಲೂ ಪರಮಾತ್ಮನು ಆವರಿಸಿದ್ದಾನೆ - ಆವಾಸವಾಗಿದ್ದಾನೆ ಎಂದು ಕೆಲವರ ಅರ್ಥ 







  ( ಜಗದೊಡೆಯ ಈಶನಿಗೆ ಈ ಜಗತ್ತು ಆಶ್ರಯ ಸ್ಥಾನವಾಗಿದೆ ಎಂಬುದು ತಾರ್ಕಿಕ ದೃಷ್ಠಿಯಿಂದ ಸರಿಯಲ್ಲವೆಂದು ಶ್ರೀ ಶಂಕರರು ಭಾವಿಸಿರಬಹುದು.  ಏಕೆಂದರೆ ಈಶನೇ ಜಗತ್ತಿಗೆ ಆಶ್ರಯನು.  ಜಗತ್ತನ್ನು ಮೀರಿ ಅವನಿದ್ದಾನೆ.)    

 ತ್ಯಕ್ತೇನ ಭುಂಜೀಥಾ ಎಂದಿದೆ. ಎಂದರೆ ತ್ಯಾಗ ಮಾಡಿ ನೀನೂ ಅನುಭವಿಸು. ಭುಂಜೀಥಾ ಎಂದರೆ ಉಣ್ಣಬೇಕು ಎಂದರೆ ಅನುಭವಿಸಬೇಕು ಎಂಬ ಅರ್ಥ ಬರುವುದು.  ತ್ಯಾಗ ಮಾಡಲು ಅಗತ್ಯವಾದುದಕ್ಕಿಂತ ಹೆಚ್ಚು ದುಡಿಯಬೇಕು-ಸಂಪಾದಿಸಬೇಕು.   ಜಗತ್ತನ್ನು ನಿರಾಕರಿಸಬೇಕಿಲ್ಲ.  ಜಗತ್ತಿನಲ್ಲಿ ನೀನೂ ಸುಖವಾಗಿರು, ಬೇರೆಯವರನ್ನೂ ಸುಖವಾಗಿರಿಸಲು ಪ್ರಯತ್ನಿಸು, ಬಿಟ್ಟು ಹೋಗುವ ಈ ಸಂಪತ್ತು ಯಾರದ್ದೂ ಅಲ್ಲ. .  ಅತಿಯಾಸೆ ಬೇಡ  ಇದು ಜೀವನದ ಸೂತ್ರ..
(ಮಾ ಗೃಧಃ  ಹದ್ದಿನಂತೆ ದುರಾಸೆಯುಳ್ಳವನಾಗಬೇಡ.  ಹದ್ದು ದುರಾಸೆಗೆ ಹೆಸರಾಗಿದೆ. ಕಸ್ಯಸ್ವಿದ್ಧನಂ ಈ ಧನ ಯಾರದ್ದು? ಎಂದರೆ ಯಾರದ್ದೂ ಅಲ ಎಂದು ಅರ್ಥ್ಲ.  ಕಾರಣ ಬಿಟ್ಟು ಹೋಗುವಂಥಾದ್ದು )
 (ಮಾಧ್ವ ಸಂಪ್ರದಾಯದ  ಭಕ್ತಿ ಪಂಥದವರು ತ್ಯಕ್ತೇನ ಎಂದರೆ ದೇವರಿಂದ ತ್ಯಕ್ತ ವಾದ -ಕೊಟ್ಟಿದ್ದನ್ನು ಅನುಭವಿಸು ಎಂದು ಅರ್ಥ ಮಾಡುತ್ತಾರೆ. ಅಲ್ಲಿ ದುಡಿಯುವ, ತ್ಯಾಗಮಾಡುವ- ಉಪಕಾರ ಮಾಡುವ ಮಾತೇ ಇಲ್ಲ !  ಏಕೆಂದರೆ ಎಲ್ಲವೂ ಅವರವರ ಕರ್ಮದಂತೆ, ದೇವರ ಇಚ್ಛೆಯಂತೆ ಜಗತ್ತು ನಡೆಯುವುದು.  ಭಕ್ತನು  ಪರಮಾತ್ಮನನ್ನು  ನೆನೆಯುವದನ್ನು ಬಿಟ್ಟು ಬೇರೇನನ್ನೂ ಮಾಡಬೇಕಾದ್ದಿಲ್ಲ. ಕಸ್ಯಸ್ವಿದ್ಧನಂ ಎಂಬುದಕ್ಕೆ  ಪರಮಾತ್ಮನದ್ದಲ್ಲದ ಬೇರೆ ಸಂಪತ್ತು ಯಾವುದಿದೆ-ಯಾವುದೂ ಇಲ್ಲ, ಎಲ್ಲಾ ಅವನಿಗೆ ಸೇರಿದ್ದುಎಂದು ಅರ್ಥಮಾಡುತ್ತಾರೆ. ಎಲ್ಲವೂ ಪರಮಾತ್ಮನ ಅಧೀನ; ಭಕ್ತನ ಕೈಯಲ್ಲಿ ಏನಾಗುವುದು? ಇದು ಅವರ ವಾದ ಸರಣಿ.   ಅದು ಜೀವನದ ಮುಖ್ಯವಾದ ಕರ್ತವ್ಯದಿಂದ ವಿಮುಖವಾದ ಜೀವನ ಕ್ರಮ ಎನಿಸುವುದು. ಜೀವನದಲ್ಲಿ, ಕರ್ತವ್ಯ - ದುಡಿಮೆ, ಸೇವೆ, ಪರೋಪಕಾರ, ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ, ಇರಬೇಕಾಗುವುದು; ಇವೆಲ್ಲಾ ಗೀತೆ ಮತ್ತು ಉಪನಿಷತ್ತಿನ ಉಪದೇಶ ಸಾರ. )

           ಮಂತ್ರ ೨ :   ಕುರ್ವನ್ನೇವೇಹ ಕರ್ಮಾಣಿ
                     ಜಿಜೀವಿಷೇಚ್ಛತಂ ಸಮಾಃ |
             ಏವಂ ತ್ವಯಿ ನಾನ್ಯಥೇತೋSಸ್ತಿ
                     ನ ಕರ್ಮ ಲಿಪ್ಯತೇ ನರೇ ||
             ಪದ್ಯ ೨ :  ಕಾಯಕವು ಈ ಲೋಕದಲಿ ನಿಯಮ ;
                     ಜಯಿಸು ನೀ ಬಾಳಿ ನೂರು ವರುಷ |
              ಆಯುವಿಕೆಗನ್ಯ ಮಾರ್ಗವೆ ಇಲ್ಲ ;
                     ಬಯಕೆ ಇಲ್ಲದಗೆ ಕರ್ಮದಂಟಿಲ್ಲ ||

(ಕಾಯಕ= ದುಡಿಮೆಆಯುವಿಕೆಗೆ + ಅನ್ಯ ಮಾರ್ಗವೇ ಇಲ್ಲ; ಆಯುವಿಕೆಗೆ= ಆರಿಸಿಕೊಳ್ಳಲುಬಯಕೆ ಇಲ್ಲದಗೆ=ಇಲ್ಲದವನಿಗೆ ಕರ್ಮದ ಅಂಟು ಇಲ್ಲ ; ಕರ್ಮ ಕೆಲಸ ಅಥವಾ ದುಡಿಮೆಯು ಈಲೋಕದಲ್ಲಿ ಮಾಡಲೇಬೇಕಾದ ನಿಯಮ - ಕರ್ತವ್ಯಜಯಿಸು ನೀನು ಬಾಳಿ ನೂರು ವರ್ಷ; ಬಯಕೆ ಇಲ್ಲದವನಿಗೆ ಕರ್ಮದ ಅಂಟು ಇಲ್ಲ)
 
  ಭಗವದ್ಗೀತೆಯ ಕರ್ಮಯೋಗದ ಸಾರವನ್ನು ಒಂದೇ ಶ್ಲೋಕದಲ್ಲಿ ಹೇಳಿದೆ. ಪರಮಾತ್ಮನ ಸರ್ವವ್ಯಾಪಕತ್ವದ ಅರಿವನ್ನು ಅಂತರಂಗದಲ್ಲಿ  ಹೊಂದಿ, ಅತಿಯಾಸೆ ಪಡದೆ ಕರ್ತವ್ಯ ದೃಷ್ಠಿಯಿಂದ ಮಾಡಿದ ಕರ್ಮವು, ಮನುಷ್ಯನಿಗೆ ಅಂಟದು.  ಕಾಯಕವನ್ನು ಬಿಟ್ಟು ಆಯ್ಕೆ ಮಾಡಿಕೊಳ್ಳಲು ಅನ್ಯ ಅಥವಾ ಬೇರೆ ಮಾರ್ಗವೇ ಇಲ್ಲ. (ಏಕೆಂದರೆ ಬದುಕಿರುವವನು ಕೆಲಸಮಾಡದೆ ಒಂದು ಕ್ಷಣವೂ ಬದುಕಿರಲು ಆಗುವುದಿಲ್ಲ. -  ಗೀತೆ.) ಆದ್ದರಿಂದ ಆಶಾವಾದಿಯಾಗಿ, ಕರ್ತವ್ಯ ಮಾಡುತ್ತಾ ಪರೋಪಕಾರಿಯಾಗಿ (ತ್ಯಕ್ತೇನ) ನೂರು ವರುಷ ಆರೋಗ್ಯವಂತನಾಗಿ ಬಾಳುವ ಪ್ರಯತ್ನ ಮಾಡಬೇಕು. ಈ ಬಾಳಿಗೆ ಅರ್ಥವಿಲ್ಲವೆಂದು ನಿರಾಶೆ ಸಲ್ಲದು.
ಸಂಪ್ರದಾಯಿಕರ್ಥ: ಕಾಯಕ ಅಥವಾ ಕರ್ಮ ಎಂದರೆ ಯಜ್ಞ , ಧಾರ್ಮಿಕ ಕ್ರಿಯೆ.  ಆದರೆ ಸಂಸಾರಿಕರಿಗೆ-ಗೃಹಸ್ತರಿಗೆಜೀವನ ನಿರ್ವಹಣೆಗೆ ಅಗತ್ಯವಾದ  ಎಲ್ಲಾ ಕರ್ಮಗಳನ್ನೂ ಎಂದು  ಕರ್ಮ ಪದಕ್ಕೆ ಅರ್ಥ ಮಾಡುವುದೇ ಸರಿ.
 (ಮೂಲದಲ್ಲಿ, ಇಹ ಕರ್ಮಾಣಿ  ಈ ಲೋಕದ ಕರ್ಮಗಳನ್ನು ಎಂದು ಹೇಳಿದೆ. ಈ ಜಗತ್ತಿನಲ್ಲಿ  ಬದುಕಿರಲು ಬೇಕಾದ ಎಲ್ಲಾ ಕರ್ಮಗಳು ಎಂದರೆ ದುಡಿಮೆ ಮತ್ತು ಇತರೆ ಕಾರ್ಯಗಳು )

ಮಂತ್ರ  ೩:   ಅಸುರ್ಯಾ ನಾಮ ತೇ ಲೋಕಾ
                     ಅಂಧೇನ ತಮಸಾSSವೃತಾಃ |
              ತಾಂಸ್ತೇ ಪ್ರೇತ್ಯಾಭಿಗಚ್ಛಂತಿ
                     ಯೇ ಕೇ ಆತ್ಮ ಹನೋ ಜನಾಃ ||

 ಪದ್ಯ  ೩:   ಅಜ್ಞಾನ ತುಂಬಿರುವ
ಕತ್ತಲೆಯ ಲೋಕಕ್ಕೆ |
             ತಿರುತಿರುಗಿ ಬರುತಿಹರು
                     ಅರಿವಿರದ ಆತ್ಮ ಹನರು ||
(ಅಜ್ಞಾನವು ತುಂಬಿರುವ ಕತ್ತಲೆಯ ಲೋಕಕ್ಕೆ ತರುತಿರುಗಿ - ಪುನಃ ಪನಃ ಬರುತ ಇಹರು ; ಬರುತ್ತಿರುವರು   ಅರಿವು+ಇರದ ಆತ್ಮ ಹನರು - ಕೊಂದವರು)
   
     ಮೇಲೆ ಹೇಳಿದ ಕರ್ಮಯೋಗದ ರಹಸ್ಯವನ್ನು ಅರಿಯದವರು ಪನಃ ಪನಃ ಜನ್ಮವೆತ್ತಿ ಈ ಲೋಕಕ್ಕೆ ಮರಳುತ್ತಾರೆ.  ಆತ್ಮ ವಿಚಾರ ಮಾಡಿ ಪರಮಾತ್ಮ  ತತ್ವವನ್ನು ಅರಿಯದಿರುವುದು ಆತ್ಮ ಹತ್ಯೆಯನ್ನು ಮಾಡಿಕೊಂಡಂತೆ ಎನ್ನುವುದು ಅಭಿಪ್ರಾಯ. ಆತ್ಮವನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ.
 ಈ ಮೇಲಿನ ಮೂರು ಮಂತ್ರಗಳಲ್ಲಿ ಜೀವನ ದರ್ಶನದ ಸಾರಾಂಶವನ್ನು ಹೇಳಿದೆ.  ನಂತರ ಆತ್ಮ ತತ್ವದ ವಿಚಾರ  ಹೇಳಿದೆ.

ಮಂತ್ರ  ೪ : ಅನೇಜದೇಕಂ  ಮನಸೋಜವೀಯೋ |
                     ನೈನದ್ದೇವಾ ಆಪ್ನುವನ್  ಪೂರ್ವಮರ್ಷತ್ |
              ತದ್ದಾವತೋS ನ್ಯಾನ್  ಅತ್ಯೇತಿ ತಿಷ್ಠತ್
                     ತಸ್ಮಿನ್ನಪೋ  ಮಾತರಿಷ್ವಾ   ದಧಾತಿ ||

ಮಂತ್ರ  ೫ : ತದೇಜತಿ, ತನ್ನೈಜತಿ,
                     ತದ್ದೂರೇ  ತದ್ವಂತಿಕೇ |
ತದಂತರಸ್ಯ  ಸರ್ವಸ್ಯ,
       ತದು ಸರ್ವಸ್ಯಾಸ್ಯ ಬಾಹ್ಯತಃ ||

ಪದ್ಯ  ೪  :  ಅಚಲ ತತ್ವವದುವೇಗದಲಿ ಮನವ ಮೀರಿಹುದು,
                           ಕಣ್ಣುಕಿವಿಯಾದಿಗಳು ಮುಟ್ಟಲಾರವದನು |
              ಇದ್ದೆಡೆಯಲೇ ಇದ್ದಂತೆ ಧಾವಿಪರ ಮುಂದಿಹುದು
                           ಜೀವಿಗಳಿಗದುವೆ ಆತ್ಮ , ತಾ ಪ್ರಾಣದಾತ ||

(ಅಚಲ = ಚಲಿಸದ  ತತ್ವವು ಅದು, ವೇಗದಲ್ಲಿ ಮನವನ್ನು ಮೀರಿದೆ : ಕಣ್ಣು ಕಿವಿ ಆದಿಗಳು, ಕಣ್ಣುಕಿವಿ ಮೊದಲಾದವುಗಳು, ಮುಟ್ಟಲಾರವು -ತಲುಪಲಾರವು- ಅರ್ಥಮಾಡಿಕೊಳ್ಳಲಾರವುಅದನು - ಅದನ್ನುಇದ್ದ ಎಡೆಯಲೇ ಇದ್ದಂತೆ- ಇದ್ದುಕೊಂಡು  ಧಾವಿಪರ-ಓಡುವವರ ಮುಂದೆ ಇಹುದು-ಇರುವುದು.  ಜೀವಿಗಳಿಗೆ ಅದುವೆ -ಅದೇ ಆತ್ಮ ; ತಾ ತಾನು - ಆತ್ಮವು ಪ್ರಾಣದಾತ.- ಎಲ್ಲಾ ಜೀವಿಗಳಿಗೆ ಪ್ರಾಣವನ್ನು ಕೊಡುವಂತಾದ್ದು. )


ಪದ್ಯ  ೫ :   ಚಲಿಸುವುದದು ಅತಿ ವೇಗದಲಿ; ಚಲಿಸದಿಹುದು.
                           ಭವಿಗತಿ ದೂರ ಜ್ಞಾನಿಗತಿ ಹತ್ತಿರವು, |
              ಎಲ್ಲರೊಳಗಡಗಿಹುದು,
                           ಹೊರಗಿಹುದು ದೃಶ್ಯ ಜಗದಿ ||
(ಚಲಿಸುವುದು+ ಅದು, ಅತಿ ವೇಗದಲ್ಲಿ, ಚಲಿಸದೆ + ಇಹುದು, ಭವಿಗೆ +ಅತಿ ದೂರ, ಜ್ಞಾನಿಗೆ +ಅತಿ ಹತ್ತಿರವು, ಎಲ್ಲರ +ಒಳಗೆ + ಅಡಗಿಹುದುದೃಶ್ಯ ಜಗದ ಹೊರಗೆ + ಇಹುದು )

      ಪರಸ್ಪರ ವಿರುದ್ಧ ಗುಣಗಳನ್ನು ಹೇಳಿ , ಶಬ್ದಗಳಿಂದ ವಿವರಿಸಲು ಆಗದ್ದನ್ನು  ಕಾವ್ಯ ಭಾಷೆಯಲ್ಲಿ ಆತ್ಮ ತತ್ವದ ಲಕ್ಷಣಗಳನ್ನು ಹೇಳಿದೆ.  ಚಲನೆ ಇಲ್ಲದ ದೃಢವಾದ ಒಂದೇ ತತ್ವ  ಅದು; ಅದು ಇಂದ್ರಿಯಗಳಿಗೆ ಸಿಕ್ಕದುಮನಸ್ಸಿಗಿಂತ ವೇಗವುಳ್ಳದ್ದು. ಇದ್ದಲ್ಲಿಯೇ ಇದ್ದು ಓಡುತ್ತಿರುವ ಇತರರನ್ನು ಹಿಂದೆ ಹಾಕುತ್ತದೆ.  ಅದೇ ಎಲ್ಲದರ ಪ್ರಾಣದಾತ-ಮಾತರಿಶ್ವ ; ಸಕಲ ಚರಾಚರ ವಸ್ತುಗಳ ಕರ್ಮ ಪ್ರವಾಹವನ್ನು (ಆಪ) ನಿಯಂತ್ರಿಸುತ್ತದೆ.
   ಅದು ಚಲಿಸುತ್ತೆ, ಚಲಿಸುವುದಿಲ್ಲ.  ಪ್ರಾಪಂಚಿಕರಿಗೆ ದೂರಜ್ಞಾನಿಗೆ ಹತ್ತಿರ.  ಅದು ಎಲ್ಲದರ ಒಳಗಿದೆಆದರೆ ಅದೇ ಎಲ್ಲದರ ಹೊರಗಿದೆ - ದೃಶ್ಯ ಜಗದ ಹೊರಗಿದೆ.  ಭಗವದ್ಗೀತೆಯ ೧೩ನೇ ಅಧ್ಯಾಯದ ೧೫ನೇ  ಶ್ಲೋಕ ಇದೇಮಾತನ್ನು ಹೇಳುವುದು.

  ಮುಂದೆ ಆತ್ಮ ಜ್ಞಾನಿಯ ಲಕ್ಷಣಗಳನ್ನು ಹೇಳಿದೆ.

 ಮಂತ್ರ  ೬ :  ಯಸ್ತು ಸರ್ವಾಣಿ ಭೂತಾನಿ
                     ಆತ್ಮನ್ಯೇವಾನು ಪಶ್ಯತಿ |
              ಸರ್ವಭೂತೇಷು ಚಾತ್ಮಾನಂ
                     ತತೋ ನ ವಿಜುಗುಪ್ಸತೇ ||

 ಪದ್ಯ  ೬ :  ತನ್ನಾತ್ಮ ಭಾವದಲಿ ಜೀವ ಕೋಟಿಗಳ,
ಸರ್ವ  ಜೀವಿಗಳೊಳಗೆ  ತನ್ನಾತ್ಮವನು|
             ಸ್ವಾನು ಭಾವದಿ ಕಾಣುವವ, ಸರ್ವಾತ್ಮನವ,
                     ಅವ ನಿಂದಿಸನು ತಾ ಪ್ರೇಮ ಸಾಗರನು ||

(ತನ್ನ  ಆತ್ಮ ಭಾವದಲಿ ಜೀವ ಕೋಟಿಗಳ, ಸರ್ವ ಜೀವಿಗಳ ಒಳಗೆ ತನ್ನ ಆತ್ಮವನು, ಸ್ವ+ಅನುಭಾವದಿ ಕಾಣುವವ, ಸರ್ವ ಆತ್ಮನು ಅವ - ಅವನು ; ಅವನು ಯಾರನ್ನೂ ನಿಂದಿಸನು, ಪ್ರೇಮಸಾಗರನು)






ಮಂತ್ರ  ೭ : ಯಸ್ಮಿನ್  ಸರ್ವಾಣಿ ಭೂತಾನಿ,
                     ಆತ್ಮೈ ವಾ ಭೂದ್ವಿಜಾನತಃ |
              ತತ್ರ  ಕೋ  ಮೋಹ  ಕಃ ಶೋಕ
                     ಏಕತ್ವಮನುಪಶ್ಯತಃ ||

ಪದ್ಯ  ೭ : ಸರ್ವಜೀವಿಗಳೊಳಗೆ ತನ್ನಾತ್ಮ ಭಾವವಿರೆ,
              ಹುಟ್ಟಲಾರದು ಬಯಕೆ  ಮೋಹವಿರದು |
          ಸ್ವಾನು ಭಾವದಿ ಕಾಣುತ್ತಲಿಹನವನು,
ಜಗದಲೆಲ್ಲೆಡೆ  ಒಂದೇ ಆತ್ಮ ತತ್ವವನು. ||

( ಸರ್ವ ಜೀವಿಗಳ ಒಳಗೆ ತನ್ನ ಆತ್ಮ ಭಾವವು ಇರೆ-ಇರಲು, ಹುಟ್ಟಲರದು ಬಯಕೆಮೋಹವು ಇರದು, ಸ್ವ -ಸ್ವಂತ ಅನುಭಾದಿ - ಅನಭವದಿಂದ , ಕಾಣುತ್ತಲಿ ಇಹನು ಅವನು, ಜಗದ ಎಲ್ಲೆಡೆ ಒಂದೇ ಆತ್ಮ ತತ್ವವನು)

ಎಲ್ಲಾ ಕಡೆಗಳಲ್ಲಿ, ಎಲಾ ಜೀವಿಗಳಲ್ಲಿ  ತನ್ನ ಆತ್ಮವನ್ನೇ ಕಾಣುವವನಿಗೆ, ಬಯಕಯೇ ಉಂಟಾಗುವುದಿಲ್ಲ, ಯಾವುದರ ಬಗ್ಗೆಯೂ ಮೋಹವಿರುವುದಿಲ್ಲ,   ತನ್ನ ಆತ್ಮದಲ್ಲಿ ಸರ್ವ ಜೀವಿಗಳನ್ನೂ  ಕಾಣುವವನು  ಕೋಪ, ನಿಂದೆಗಳನ್ನು ಮಾಡನು.  ಯಾರ ಬಗ್ಗೆಯೂ ಬೇಸರವಿಲ್ಲದವನು  ಎಲ್ಲರ ಬಗ್ಗೆಯೂ ಪ್ರೇಮ  ಭಾವವನ್ನು ಹೋದಿರುತ್ತಾನೆ.  ಇದು ಜ್ಞಾನಿಗೆ ಸಹಜ.    ಅದೇ ಭಾವ  ಗೀತೆಯಲ್ಲಿಯೂ ಇದೆ  ಭಗವದ್ಗೀತೆಯ ಅಧ್ಯಾಯ ೬, ಶ್ಲೋಕ ೨೯ರಲ್ಲಿ  ಯಾರು ಸರ್ವ ಭೂತಗಳನ್ನೂ (ಜೀವಿಗಳನ್ನೂ) ತನ್ನಲ್ಲಿಯೂಸರ್ವ ಭೂತಗಳಲ್ಲಿ ತನ್ನನ್ನೂ ಕಾಣುವನೋ ಅವನು ಸಮದರ್ಶಿ, ಯೋಗಿ ಎಂದಿದೆ.(೬)
ಆತ್ಮ ತತ್ವವನ್ನು ಅನುಭವದ ಮೂಲಕ ತಿಳಿದವನಾಗಿದ್ದು, ಎಲ್ಲಾ ಜೀವಿಗಳಲ್ಲಿ ತನ್ನ ಆತ್ಮ ವನ್ನೇ ನೋಡುವವನಲ್ಲಿ ಬಯಕೆ, ಮೋಹ, ಶೋಕಗಳು ಹುಟ್ಟುವುದೇ ಇಲ್ಲ.(೭)



ಬ್ರಹ್ಮ ಜ್ಞಾನಿಪರಬ್ರಹ್ಮ ತತ್ವ  ಅಥವಾ ಆತ್ಮ,   ಇವಕ್ಕೆ ಅನ್ವಯವಾಗುವ ಗುಣಗಳನ್ನು ಹೇಳಲಾಗುತ್ತದೆ.
ಮಂತ್ರ  ೮ ; ಸ ಪರ್ಯಗಾಚ್ ಛುಕ್ರಮಕಾಯಮವ್ರಣಮ್
                     ಅಸ್ನಾವಿರಂ ಶುದ್ಧಮಪಾಪವಿದ್ಧಮ್ |
              ಕವಿರ್ಮನೀಷೀ ಪರಿಭೂಃ  ಸ್ವಯಂಭೂರ್
                     ಯಾತಾತಥ್ಯ ತೋರ್ಥಾನ್ ವ್ಯದಧಾತ್
ಛಾಶ್ವತೀಭ್ಯಃ ಸಮಾಭ್ಯಃ ||
(ಶಾಶ್ವತೀಭ್ಯಃ ಸಮಾಭ್ಯಃ)

ಪದ್ಯ  ೮ ;   ಕಾಯವಿಲ್ಲವುಪರಿಶುದ್ಧರೋಗ ರಹಿತನು,
                     ಅರಿವಿಂಗವಗೆ ನರತಂತು ಬೇಕಿಲ್ಲ |
              ತಾನೆ ತನ್ನೊಡೆಯ, ಬೆಳಕಿವನು, ಸರ್ವಜ್ಞ
                     ಸರ್ವವ್ಯಾಪಿಯು, ಶಾಶ್ವತನು, ಕರ್ತನಾದರೂ ಮುಕ್ತನು ||

(ಕಾಯವು-ದೇಹವು ಇಲ್ಲವುಪರಿಶುದ್ಧರೋಗ ರಹಿತನುಅರಿವಿಂಗೆ - ಅರಿಯಲು-ತಿಳಿಯಲು, ಅವಗೆ- ಅವನಿಗೆ, ನರತಂತು ಬೇಕಿಲ್ಲ, ತಾನೆ ತನ್ನ ಒಡೆಯ- ಯಜಮಾನ, ಬೆಳಕು ಇವನು, ಸರ್ವಜ್ಞಸರ್ವವ್ಯಾಪಿಯು, ಶಾಶ್ವತನು, ಕರ್ತನಾದರೂ ಮುಕ್ತನು )


              ದೇಹವೇ ಇಲ್ಲದ, ಪರಿಶುದ್ಧವಾದ, ರೋಗಗಳು ಅಂಟದಈ ಆತ್ಮ ತತ್ವವು ಸರ್ವಜ್ಞ ವಾಗಿದೆ, ಅದಕ್ಕೆ ತಿಳಿಯಲು ಮೆದುಳು ಬೇಕಾಗಿಲ್ಲ, ಮನುಷ್ಯನಿಗೆ ಅರಿಯಲು ಮೆದುಳು ಬೇಕು, ಮದುಳಿನಿಂದ ಹೊರಟ ನಾನಾ ನರನಾಡಿಗಳು ಬೇಕು, ಆದರೆ ಆತ್ಮ ತತ್ವಕ್ಕೆ ಈ ವ್ಯವಸ್ಥೆ ಬೇಕಾಗಿಲ್ಲ.  ಇದು ವಿಚಿತ್ರವದರೂ ಸತ್ಯ.  ಅದು ನಮ್ಮ ಕಣ್ಣಿಗೆ ಕಾಣುವ ಬೆಳಕಿಗಿಂತ ಬೇರೆಯಾದ ವಿಶಿಷ್ಟವಾದ ಆನಂದಮಯ ಬೆಳಕು.  ಅದು ಆಥವಾ ಆತ್ಮನು, ಎಲ್ಲಾ ಕಾರ್ಯಗಳಿಗೆ ಕಾರಣನಾಗಿ ಕರ್ತನಾದರೂ  ಆತ್ಮಕ್ಕೆ ಕರ್ಮದ ಆಂಟಿಲ್ಲ. (೮)
 
ಇದರ ನಂತರ ಸಾಧನೆಯ ಮಾರ್ಗ ಹೇಳಿದೆ,

ಮಂತ್ರ  ೯ : ಅಂಧಂತಮಃ  ಪ್ರವಿಶಂತಿ
                     ಯೇ Sವಿದ್ಯಾಮುಪಾಸತೇ |
              ತತೋ ಭೂಯ ಇವ ತೇ ತಮೋ
                     ಯ ಉ ವಿದ್ಯಾಯಾ ಗುಂ ರತಾಃ ||
 ಪದ್ಯ  ೯ :  ಕತ್ತಲೆಯ ಸೇರುವನು 
ಅವಿದ್ಯೆಯುಪಾಸಕನು |
              ಕಗ್ಗತ್ತಲೆಯ ಹೊಗುವನವ
                     ವಿದ್ಯೆಯಲಿ ನಿರತನಾದವ ||



( ಕತ್ತಲೆಯ ಸೇರುವನು ಅವಿದ್ಯೆಯ ಉಪಾಸಕನು, ಕಗ್ಗತ್ತಲೆಯ ಹೊಗುವನು ಅವ-ಅವನು ವಿದ್ಯೆಯಲಿ ನಿರತನಾದವ)

ಮಂತ್ರ  ೧೦ :      ಅನ್ಯದೇವಾಹುರ್ವಿದ್ಯಯಾ 
                     ಅನ್ಯದಾಹುರವಿದ್ಯಯಾ |
              ಇತಿ ಶುಶ್ರಮ ಧೀರಾಣಾಂ
                     ಯೇನಸ್ತದ್ವಿಚಚಕ್ಷಿರೇ ||

ಪದ್ಯ  ೧೦ : ವಿದ್ಯೆಯೇ ಹಿರಿದೆಂಬರು
                     ಕೆಲವರರಿತವರು |
              ಅವಿದ್ಯೆ ಗರಿಮೆಯದು
ಎಂಬುದಿತರರ ನಿಲುವು ||

( ವಿದ್ಯಯೇ ಹಿರಿದು ಎಂಬರು ಕೆಲವರು ಅರಿತವರು; ಅವಿದ್ಯೆ ಗರಿಮೆಯದು-ಹೆಚ್ಚಿನದು ಎಂಬುದು, ಇತರರ ನಿಲುವು)

 ಮಂತ್ರ ೧೧ :      ವಿದ್ಯಾಂಚಾವಿದ್ಯಾಂಚ
ಯಸ್ತದ್ವೇದೋಭಯಂ ಸಹ |
              ಅವಿದ್ಯಯಾ ಮೃತ್ಯುಂ  ತೀರ್ತ್ವಾ
                     ವಿದ್ಯಾಯಾಮೃತಮಶ್ನುತೇ ||

ಪದ್ಯ  ೧೧ :  ವಿದ್ಯೆ ಅವಿದ್ಯೆಗಳ
                     ಅಂತರಂಗವನರಿತು |
              ಅವಿದ್ಯೆಯಿಂ ಮೃತ್ಯು ವನು ದಾಟಿ|
                     ವಿದ್ಯೆಯಿಂದಮೃತವ ಪಡೆಯುವುದು ||

(ವಿದ್ಯೆ ಅವಿದ್ಯೆಗಳ ಅಂತರಂಗವನು ಅರಿತು ಅವಿದ್ಯಯಿಂ - ಅವಿದ್ಯೆಯಿಂದ, ಮೃತ್ಯುವನು ದಾಟಿ, ವಿದ್ಯೆಯಿಂದ ಅಮೃತವ ಪಡೆಯುವುದು)

ವಿದ್ಯೆ ಮತ್ತು ಅವಿದ್ಯೆಯ ಸಾಧನೆ, ಪ್ರಯೋಜನಗಳನ್ನು ಹೇಳಿದೆ. ಅವಿದ್ಯೆಯ ಉಪಾಸಕನು ಕತ್ತಲೆಯನ್ನು ಸೇರುವನು ಎಂದರೆ, ಅಜ್ಞಾನಿಯಾಗಿಯೇ ಉಳಿಯುತ್ತಾನೆ ಎಂದು ಅರ್ಥ. ಅವಿದ್ಯೆ ಎಂದರೆ ಯಜ್ಞ - ಯಾಗಾದಿ  ವೈದಿಕ ಕರ್ಮಗಳು, ಉಪಾಸನೆ ಇತ್ಯಾದಿ.   ಅವುಗಳಿಂದ ಉತ್ತಮ ಲೋಕ ಪ್ರಾಪ್ತಿ ಯಾದರೂ ಆತ್ಮ ಜ್ಞಾನವನ್ನು ಕೊಡಲಾರವು. ಆದ್ದರಿಂದ ಅವನು ಕತ್ತಲೆಯನ್ನು ಸೇರುತ್ತಾನೆ, ಎನ್ನುವುದು ಸಾಂಪ್ರದಾಯಿಕ ಅರ್ಥ. ಅವಿದ್ಯೆ ಎಂದರೆ ಲೌಕಿಕ ವಿದ್ಯೆ ಹೊಟ್ಟೆ ಪಾಡಿಗಾಗಿ ಕಲಿತ ವಿದ್ಯೆ ಎಂಬ ಅರ್ಥವೂ ಇದೆ.  ಮುಂದೆ ಅವಿದ್ಯೆಯಿಂದ ಮೃತ್ಯು ವನ್ನು  ದಾಟಿ ಎಂದಿದೆ; ಮೃತ್ಯು ಎಂದರೆ ಹಸಿವು ಎಂಬ ಅರ್ಥವೂ ಇದೆ. ಆದ್ದರಿಂದ ಕೇವಲ ಅವಿದ್ಯೆಯನ್ನು ಉಪಾಸನೆ ಮಾಡುವವನು ಅಜ್ಞಾನಿಯಾಗಿಯೇ ಉಳಿಯುವನು. ಜೀವನದ ಅವಶ್ಯಕತೆಗೆ ಮತ್ತು ಕೇವಲ ಹಣ ಗಳಿಕೆಗೆ ಲೌಕಿಕ ವಿದ್ಯೆ ಯೊಂದನ್ನೇ  ಅವಲಂಬಿಸಿದರೆ ಆದು ಕತ್ತಲೆ ಎಂದರೆ  ಅದು ಅಜ್ಞಾನ.
ವಿದ್ಯೆ ಎಂದರೆ ಉಪಾಸನೆ , ಆತ್ಮ ಜ್ಞಾನದ ಮಾರ್ಗ ಎಂಬ ಅರ್ಥಗಳಿವೆ. ಲೌಕಿಕ ಧರ್ಮವನ್ನು ಬಿಟ್ಟು ಕೇವಲ ಆತ್ಮ ಜ್ಞಾನದ ಮಾರ್ಗ ಒಂದನ್ನೇ ಅನುಸರಿಸುವವನು ಇನ್ನೂ ಹೆಚ್ಚಿನ ಕತ್ತಲೆಯನ್ನು ಸೇರುತ್ತಾನೆ ಎಂದಿದೆ. ಕೇವಲ ವಿದ್ಯೆಯೊಂದನ್ನೇ ನಂಬಿ ಜಗತ್ತನ್ನು ತಿರಸ್ಕರಿಸಿದರೆ ಅದೂ ಕತ್ತಲೆ.  ಉಪವಾಸವಿರಬೇಕು ಇಲ್ಲವೇ ಪರಾವಲಂಬಿಯಾಗಿ ಬಾಳಬೇಕುಇದು ಹೆಚ್ಚಿನ ತಪ್ಪು ಮತ್ತು ಅಜ್ಞಾನ ಎನ್ನುವುದು ಉಪನಿಷತ್ಕಾರನ ಭಾವವಿರಬೇಕು ( ೯)
 ಆದರೆ ಕೆಲವರು ವಿದ್ಯೆಯೇ ಎಂದರೆ ಜ್ಞಾನಕ್ಕಾಗಿ  ಕರ್ಮತ್ಯಾಗ ಮಾಡುವುದೇ ಶ್ರೇಷ್ಠ ಎನ್ನುತ್ತಾರೆ.  ಮತ್ತೆ ಕೆಲವರು ಲೌಕಿಕ ಧರ್ಮವನ್ನು ಬಿಡದೆ ಪಾಲಿಸುವುದೇ  ಉತ್ತಮ ಎನ್ನತ್ತಾರೆ. ( ಸಂನ್ಯಾಸವೋ, ಸಂಸಾರವೋ, ಯಾವುದು ಉತ್ತಮ ಇದರ  ನಿರ್ಣಯಕ್ಕಾಗಿಯೇ ಧರ್ಮವ್ಯಾಧನ ಕಥೆ ಇದೆ) (೧೦)
   ಆದ್ದರಿಂದ ಸಮನ್ವಯವೇ  ಜೀವನದ ಸೂತ್ರ.  ಕಾಯಕದಿಂದ  ಹೊಟ್ಟೆ ತುಂಬಿಸಿಕೊಳ್ಳಬೇಕು, ಜ್ಞಾನ ಸಾಧನೆಯಿಂದ ಅಮೃತತ್ವ ವನ್ನು ಪಡೆಯಬೇಕು. ಜ್ಞಾನಿಯಾದರೂ ಕಾಯಕವನ್ನು ತಿರಸ್ಕರಿಸಬಾರದು. ಎಂಬುದು ಸರಳ ಅರ್ಥ.  ಸಂಸಾರಿಕರೂ ಸಾಧನೆಯಿಂದ  ಜ್ಞಾನಿಗಳಾಗಿ ಬಾಳಿರುವ  ಉದಾಹರಣೆ ಉಪನಿಷತ್ತುಗಳಲ್ಲಿಯೂ ಪುರಾಣಗಳಲ್ಲಿಯೂ  ಇದೆ. 
ಸಾಂಪ್ರದಾಯಕ ಅರ್ಥ:- ಶುದ್ಧ ಜ್ಞಾನ ಮಾರ್ಗವನ್ನು ಅನುಸರಿಸದೆ, ಆತ್ಮ ವಿಚಾರ ಮಾಡದೆ, ಕೇವಲ ಉಪಾಸನೆ ಮಾಡುವವನು ಹೆಚ್ಚಿನ, ಕತ್ತಲೆ ಅಥವಾ ಅಜ್ಞಾನವನ್ನು ಹೊಂದುತ್ತಾನೆ.  ವಿದ್ಯೆ  ಎಂದರೆ ಉಪಾಸನೆ ಎಂದೂ ಅರ್ಥವಿದೆ ಶ್ರೀಶಂಕರರು ಈ ಅರ್ಥವನ್ನೇ ಹಿಡಿದಿದ್ದಾರೆ:  ಅವಿದ್ಯೆಯಾದ ಯಜ್ಞ ಯಾಗಗಳಿಂದ ಅಥವಾ ವಿದ್ಯೆ ಯಾದ ಉಪಾಸನಾ ಅಥವಾ ಯೋಗಸಾದನೆ ಯಿಂದ ಪೂರ್ಣ ಜ್ಞಾನ ದೊರಕಲಾರದು; ಕರ್ಮಫಲದಿಂದ  ಜ್ಞಾನವುಂಟಾದರೆ ಕರ್ಮಫಲವಾದ್ದರಿಮದ ಜ್ಞಾನವು ನಶ್ವರವೆಂದು ಹೇಳಿದಂತಾಗುತ್ತದೆ, ಜ್ಞಾನವು ನಶ್ವರವಲ್ಲ; ಆದ್ದರಿಂದ ವಿಚಾರದಿಂದಲೇ ಜ್ಞಾನವುಂಟಾಗುವುದು. ಕರ್ಮವೆಲ್ಲಾ ಚಿತ್ತ ಶುದ್ಧಿಗಾಗಿ ಇರುವುದು.  (ಕರ್ಮ) ಸಂನ್ಯಾಸ ಮತ್ತು  ವಿಚಾರದಿಂದ ಮೋಕ್ಷ ಅಥವಾ ಜ್ಞಾನ ಎಂಬುದು ಶ್ರೀ ಶಂಕರರ ಅರ್ಥ. ಮುಂದಿನ ಶ್ಲೋಕಗಳಿಗೂ ಅವರು ಇದೇ ಬಗೆಯ ಅರ್ಥ ಮಾಡಿದ್ದಾರೆ.  (೧೧)  ಆದರೆ ಕರ್ಮಯೋಗ ನಿರತರಾಗಿದ್ದು ಸಂಸಾರಿಗಳೂ ಆಗಿದ್ದು, ಜ್ಞಾನಿಗಳಾಗಿರುವವರ ಉದಾಹರಣೆಗಳು ಬಹಳ ಇರುವುದನ್ನು ನಾವು ಕಾಣುತ್ತೇವೆ.









ಮಂತ್ರ  ೧೨:   ಅಂಧಂತಮಃ ಪ್ರವಿಶಂತಿ
                     ಯೇS ಸಂಭೂತಿಮುಪಾಸತೇ, |
              ತತೋ ಭೂಯ ಇವ ತೇ ತಮೋ
                     ಯ ಉ ಸಂಭೂತ್ಯಾಂ (ಗ್ಂ) ರತಾಃ ||

ಪದ್ಯ  ೧೨:    ಕತ್ತಲೆಯ ಸೇರುವನು,
                     ಅಸಂಭೂತಿಯುಪಾಸಕನು |
              ಕಗ್ಗತ್ತಲೆಯ ಹೊಗುವನವ,
                     ಸಂಭೂತಿ ರತನು ||
(ಕತ್ತಲೆಯ ಸೇರುವನು ಅಸಂಭೂತಿಯ ಉಪಾಸಕನು; ಕಗ್ಗತ್ತಲೆಯ ಹೊಗುವನು ಅವ-ಅವನು ,-ಸಂಭೂತಿ ರತನು)

ಮಂತ್ರ  ೧೩:   ಅನ್ಯದೇವಾಹುಃ ಸಂಭವಾತ್,
                     ಅನ್ಯದಾಹುರಸಂಭವಾತ್ |
              ಇತಿ ಶುಶ್ರುಮ ಧೀರಾಣಾಂ,
                     ಯೇನಸ್ತದ್ವಿಚಚಕ್ಷಿರೇ ||

ಪದ್ಯ  ೧೩ :   ಸಂಭೂತಿಯೇ ಹಿರಿದೆಂಬರು ,
                     ಕೆಲವರರಿತವರು
              ಅಸಂಭೂತಿ ಗರಿಮೆಯದೆಂದು
                     ಮತ್ತೆ ಕೆಲಬರ ಮತವು ||

(ಸಂಭೂತಿಯೇ ಹಿರಿದು ಎಂಬರು ಕೆಲವರು ಅರಿತವರು : ಅಸಂಭೂತಿ ಗರಿಮೆಯದು- ಹೆಚ್ಚಿನದು ಎಂದು ಮತ್ತೆ ಕಲಬರ-ಕೆಲವರ ಮತವು-ಅಭಿಪ್ರಾಯವು)

ಮಂತ್ರ  ೧೪ :   ಸಂಭೂತಿಂ ಚ  ವಿನಾಶಂ ಚ,
                     ಯಸ್ತದ್ವೇದೋಭಯಂ ಸಹ |
               ವಿನಾಶೇನ ಮೃತ್ಯುಂ ತೀರ್ತ್ವಾ
                     ಸಂಭೂತ್ಯಾಮೃತಮಶ್ನುತೇ ||

ಪದ್ಯ  ೧೪ :   ಸಂಭೂತಿಯ ಮತ್ತೆ ವಿನಾಶದ,
                     ಆಂತರ್ಯವನರಿತು |
              ವಿನಾಶದಿಂ ಮೃತ್ಯುವನು ದಾಟಿ,
                     ಸಂಭೂತಿಯಿಂ ಅಮೃತತ್ವವನು ಪಡೆಯುವುದು ||

(ಸಂಭೂತಿಯ ಮತ್ತೆ -ಆನಂತರ ವಿನಾಶದ ಆಂತರ್ಯವನು ಅರಿತುವಿನಾಶದಿಂ-ವಿನಾಶದಿಂದ  ಮೃತ್ಯುವನು ದಾಟಿ ಸಂಭೂತಿಯಿಂ-ಸಂಭೂತಿಯಿಂದ ಅಮೃತತ್ವವನು ಪಟೆಯುವುದು)


  ಸಂಭೂತಿ, ಅಸಂಭೂತಿ ಪದಗಳಿಗೆ ಅನೇಕ  ಬಗೆಯ ಅರ್ಥ ಮಾಡಿದ್ದಾರೆ.  ಸಂಭೂತಿ ಎಂದರೆ  ಜಗತ್ತು ಅಥವಾ ಜಗದ್ರೂಪದಲ್ಲಿರುವ  ಹಿರಣ್ಯ ಗರ್ಭ.  ಬ್ರಹ್ಮ . ಅಸಂಭೂತಿ ಎಂದರೆ ಪ್ರಕೃತಿ, ಮಾಯಾಶಕ್ತಿ, ಅಥವಾ ಪ್ರಾಪಂಚಿಕ ಜಗತ್ತು .  ಸಗುಣ ಬ್ರಹ್ಮನನ್ನು ಉಪಾಸಿಸುವವರೂ, ಮಾಯಾಶಕ್ತಿಯನ್ನು  ಉಪಾಸಿ ಸುವವರೂ  ಉತ್ತಮ ಲೋಕಗಳನ್ನೂಅಣಿಮಾದಿ ಅಷ್ಟ ಸಿದ್ಧಿಗಳನ್ನೂ ಪಡೆಯಬಹುದು, ಆದರೆ ಆತ್ಮ ಜ್ಞಾನವನ್ನು ಪಡೆಯಲಾರರು; ಇದು ಪಾರಂಪರಿಕ ಅರ್ಥ.
  ಸರಳವಾದ ಅರ್ಥ : ಅಸಂಭೂತಿಯನ್ನು ಎಂದರೆ,  ಬದಲಾವಣೆ ಹೊಂದುವ ಈ ಜಗತ್ತನ್ನು ಅಥವಾ  ಲೌಕಿಕ ಸುಖ ಭೋಗಗಳು.   ಅದರಲ್ಲಿ ಮಳುಗಿರುವರೋ, ಯಾರು ಪರಮಾತ್ಮನನ್ನು ಮರೆತು ನಶ್ವರವಾದ ಲೌಕಿಕ ಸುಖ ಭೋಗಗಳಲ್ಲಿ ಮುಳಗಿರುವರೋ ಅವರು ಕತ್ತಲೆಯನ್ನು ಸೇರುವರು ಎಂದರೆ ಅಜ್ಞಾನದಲ್ಲಿ ಇರುವರು.  ಯಾರು ಜಗತ್ತನ್ನು ತಿರಸ್ಕರಿಸಿ ಪ್ರಾಪಂಚಿಕ ಕರ್ತವ್ಯಗಳನ್ನು ಮರೆತು ದೇಹ ದಂಡನೆ  ಮಾಡುತ್ತಾ ಬ್ರಹ್ಮವೊಂದನ್ನೇ ಉಪಾಸನೆ ಮಾಡುವರೋ ಅವರು ಹೆಚ್ಚಿನ ಕತ್ತಲೆಯನ್ನು ಸೇರುತ್ತಾರೆ, (೧೨)
  ಕೆಲವು ಪ್ರಾಜ್ಞರು ಪ್ರಾಪಂಚಿಕ ಸುಖವೂ, ಕಾಯಕವೂ, ಇಹ ಲೋಕದ ಧರ್ಮವೂ ಹೆಚ್ಚಿನದೆಂದು ಹೇಳುತ್ತಾರೆ. ವಿದ್ಯೆಯನ್ನು ಪಡೆದು ಧರ್ಮದಿಂದ ಹಣಗಳಿಸಿ ಪ್ರಾಪಂಚಿಕ ಸುಖವನ್ನು ಅನುಭವಿಸತ್ತಾ  ಪರೋಪಕಾರಿಯಗಿ ಬಾಳುವುದು ಒಂದುಬಗೆಯ ಆದರ್ಶ ಜೀವನ ( ಮೂರು ಪರುಷಾರ್ಥಗಳು-ಧರ್ಮ, ಅರ್ಥ, ಕಾಮ.).  ಮತ್ತೆ ಕೆಲವರು ಜಗತ್ತು ನಶ್ವರವೆಂದೂ, ಬ್ರಹ್ಮ ಜ್ಞಾನವೇ ಶ್ರೇಷ್ಠವೆಂದು  ಹೇಳುತ್ತಾರೆ. (ನಾಲ್ಕನಯ ಪುರುಷಾರ್ಥ -ಮೋಕ್ಷವೊಂದೇ ಶ್ರೇಷ್ಠ) (೧೩)
 (ಸರಳ ಅರ್ಥ) ಬ್ರಹ್ಮ ಮತ್ತು ಮಾಯೆ (ಸಂಭೂತಿ ಮತ್ತು ಅಸಂಭೂತಿ) ಈ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕು.  ಯಾರು ಜಗತ್ತಿನಲ್ಲಿ ಇತರರ ಹಿತವನ್ನೂ , ಪ್ರಾಣ ಧಾರಣೆಗೆ ಬೇಕಾದ ಕಾಯಕವನ್ನೂ, ಮಾಡುತ್ತಾ (ಮೃತ್ಯುವನ್ನು ದಾಟಿ- ಮೃತ್ಯುವನ್ನು ಎಂದರೆ ಹಸಿವೆಯನ್ನು ತಣಿಸುವ ಮತ್ತು ಇತರೆ ಅಗತ್ಯಗಳನ್ನು ದುಡಿಮೆಯಿಂದ ಪೂರೈಸಿಕೊಡು,)  ಸರ್ವಾಂತರ್ಯಾಮಿಯಾದ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳವನೋ  ಅವನು ಹಸಿವು, ರೋಗ, ಮೊದಲಾದ ದುಃಖರೂಪವಾದ ಮೃತ್ಯು ವನ್ನು ದಾಟಿ ಅಮೃತತ್ವವನ್ನು  ಪಡೆಯುತ್ತಾನೆ. (೧೪). ಈ ಮೇಲಿನ ಆರು ಪದ್ಯಗಳು  ಹುಟ್ಟಿನಿಂದಲೇ ಜ್ಞಾನಿಗಳಾದವರಿಗೂ, ಜನ್ಮಾಂತರದಲ್ಲಿ ಸಾಧನೆ ಮಾಡಿ ಕೇವಲ ಮೋಕ್ಷ ಸಾಧನೆಗಾಗಿಯೇ ಜನಿಸಿದವರಿಗೂ ಅನ್ವಯಿಸದು.
ಈ ಆರು ಮಂತ್ರದ ಸರಳಾರ್ಥವು ಮೊದಲನೆಯ ಮೂರು ಮಂತ್ರದ ಜೀವನ ಸೂತ್ರದ ನಿಯಮಕ್ಕೆ ಅನುಗುಣವಾಗಿದೆ.  ಪ್ರಾಚೀನ ಋಷಿಗಳು ಗೃಹಸ್ಥರಾಗಿದ್ದು  ಪಶುಪಾಲನೆ ಕೃಷಿಯನ್ನು ಅವಲಂಬಿಸಿ ಜೀವನ ಮಾಡುತ್ತಾ ಬ್ರಹ್ಮ ಜ್ಞಾನಿಗಳಾಗಿ ಲೋಕ ಕಲ್ಯಾಣ ಕೆಲಸದಲ್ಲಿಯೂ ತೊಡಗಿರುತ್ತಿದ್ದರು. ಅದು ಅವರ ಜೀವನ ಮತ್ತು ಜೀವನ ಸೂತ್ರವೂ ಆಗಿತ್ತು. ಪ್ರಾಚೀನ ಋಷಿಗಳ ಜೀವನ ಈ ಮಂತ್ರಗಳ ಸಂಪ್ರದಾಯಿಕ ಅರ್ಥಕ್ಕಿಂತ ಸರಳ ಅರ್ಥಕ್ಕೇ ಹೊಂದಿಕೊಳ್ಳತ್ತದೆ. 

ಮಂದಿನದು ಸಾಧಕನ ಕೊನೆಯ ಹಂತದ ಪ್ರಾರ್ಥನೆ ;

ಮಂತ್ರ   ೧೫ :           ಹಿರಣ್ಮಯೇನ ಪಾತ್ರೇಣ
                           ಸತ್ಯಸ್ಯಾಪಿ ಹಿತಂ ಮುಖಂ |
                     ತತ್ವಂ ಪೂಷನ್ನಪಾವೃಣು
                           ಸತ್ಯ ಧರ್ಮಾಯ ದೃಷ್ಟಯೇ ||

 ಪದ್ಯ  ೧೫ :              ಸತ್ಯವನು ಮುಚ್ಚಿಹುದು
                           ಮೆರುಗು ಚಿನ್ನದ ಪಾತ್ರೆ |
                     ಅದ ಸರಿಸಿ ದರುಶನವ ಕೊಡು ವಿಶ್ವ ಪೋಷಕನೆ,
                           ಸತ್ಯ ಧರ್ಮದ ದಾರಿಗನು ನಾನು ||
 
ಮಾಯೆ ಮತ್ತು ಮೋಹದ (ಬಂಗಾರದ) ಪರದೆಯು ಸತ್ಯವನ್ನು ಮುಚ್ಚಿದೆ.  ನಾನು ಸತ್ಯ ಧರ್ಮದ ದಾರಿಯಲ್ಲಿ ನಡೆಯುವವನು, ಹೇ, ವಿಶ್ವ ಪೋಷಕನಾದ ಪ್ರಭೋ, ಆ ಚಿನ್ನದ ಮುಸುಕನ್ನು ಸರಿಸಿ ನನಗೆ ನಿನ್ನ (ಸತ್ಯದ) ದರ್ಶನವನ್ನು ಕೊಡು.  ಇದು ಸಾಧಕನ ಪ್ರಾರ್ಥನೆ. ಏಕೆಂದರೆ ಎಷ್ಟೇ ಸಾಧನೆ ಮಾಡಿದರೂ, ದೇವನ ಕರುಣೆ ಇಲ್ಲದೆ ಸತ್ಯ ದರ್ಶನವಿಲ್ಲ.


ಮಂತ್ರ  ೧೬ :             ಪೂಷನ್ ಏಕ-ಋಷೇ ಯಮ ಸೂರ್ಯ
                     (ಪೂಷನ್ನೇಕರ್ಷೇ  ಯಮಸೂರ್ಯ)
ಪ್ರಾಜಾಪತ್ಯ ವ್ಯೂಹ ರಶ್ಮೀನ್ ಸಮೂಹ |
                     ತೇಜೋ ಯತ್ತೇ  ರೂಪಂ ಕಲ್ಯಾಣತಮಂ,
                           ತತ್ತೇ ಪಶ್ಯಾಮಿ,
                     ಯೋSಸಾವಾಸೌ ಪುರುಷಃ ಸೋSಹಮಸ್ಮಿ ||

ಪದ್ಯ  ೧೬ :               ಪೋಷಕನೆ, ನಿರೀಕ್ಷಕನೆ, ಸೂರಿಯನೆ, ನಿಯಾಮಕನೆ,
                           ಪ್ರಜಾಪಾಲಕನೆ, ನಿನ್ನ ಸುಡು ಬೆಳಕನೋಸರಿಸೋ,|
                     ನಿನ್ನ ಆನಂದಮಯ ತೇಜವನು ನೋಡುವೆನು,
                           ಓ ಕಂಡೆ ನಾ ನಿನ್ನ!  ನೀನೆ ನಾನೆಂದರಿತೆನೆಲಾ ! ||
(ಬೆಳಕನು ಓಸರಿಸೋ:  ನೀನೆ ನಾನೆಂದು ಅರಿತೆನೆಲಾ! )
    
ಇದು ಸೂರ್ಯನ, ಹಿರಣ್ಯಗರ್ಭನ ಪ್ರಾರ್ಥನೆಅಥವಾ ಸಗುಣ ಬ್ರಹ್ಮನ ಪ್ರಾರ್ಥನೆ. ದರ್ಶನ ಒಂದು ವಿಶಿಷ್ಠ ಆನಂದಮಯ ಬೆಳಕಿನ ರೂಪ. 
     ಆದರೆ ಸಾಧಕನಿಗೆ ಕೊನೆಯಲ್ಲಿ, ಸೋSಹಮಸ್ಮಿ  ಅವನೇ ನಾನು ಎಂಬ ಪರಬ್ರಹ್ಮದ ಅನುಭೂತಿ (ವಿಶೇಷ ಅನುಭವ) ಯಾಗಿದೆ ಎಂದು ತಿಳಿಯಬಹುದು.  ಪರಬ್ರಹ್ಮದಲ್ಲಿ ಮನಸ್ಸು ಚಿತ್ತಗಳು ಲೀನ ವಾದಮೇಲೆ  ನಾನು ನೀನು ಎಂಬ ಭಾವನೆಯೇ ಉಳಿಯುವುದಿಲ್ಲ.  ಕೇವಲ ಔಪಚಾರಿಕವಾಗಿ ಕಂಡೆ, ನಾನು-ನೀನು  ಎಂಬ ಪದಗಳನ್ನು ಉಪಯೋಗಿಸಿದೆ.  ಒಂದೇ ಆದ ಮೇಲೆ ಕಾಣುವುದು  ಇಲ್ಲ- ಅನುಭವ ಅಷ್ಟೇ. (೧೬)



ಮಂತ್ರ  ೧೭ ;             ವಾಯುರನಿಲಮಮೃತಂ,
                           ಅಥೇದಂ ಭಸ್ಮಾಂತಂ ಶರೀರಂ |
                     ಓಂ ಕ್ರತೋ ಸ್ಮರ ಕೃತಂ ಸ್ಮರ
                           ಕ್ರತೋ ಸ್ಮರ ಕೃತಂ ಸ್ಮರ ||

ಪದ್ಯ  ೧೭ :        ಪ್ರಾಣ ಸೇರಲಿ ಅಮೃತಾತ್ಮನನು,
                           ಭಸ್ಮವಾಗಲಿ ದೇಹವದು |
                     ಸ್ಮರಿಸು ಕರ್ತನನು, ಮತ್ತವನ  ಕಾರ್ಯವನು
                           ಓಂಕಾರನನು ನೆನೆ - ಕರ್ತನನು- ಕಾರ್ಯವನು ||
(ಅಮೃತ ಆತ್ಮನನು ; ಮತ್ತೆ  ಅವನ ಕಾರ್ಯವನು )

ಇದು ಸಾಧಕನ ಅಂತ್ಯಕಾಲದ, ದೇಹಬಿಡುವಾಗಿನ ಪ್ರಾರ್ಥನೆಯೆಂದು ಹೇಳಲ್ಪಡುತ್ತದೆ.  ದೇಹವನ್ನು ಬಿಡುವಾಗ ಮೂಲ ಚೈತನ್ಯ ಸ್ವರೂಪವಾದ ಓಂ ಕಾರವನ್ನೂ ಆ ಮೂಲಕ ಕರ್ತನನ್ನೂ ನೆನೆಯಬೇಕೆಂಬುದು ತಾತ್ಪರ್ಯ. ಸಾಧಕನ ಪ್ರಾರ್ಥನೆ ಪ್ರಾಣವು  ಮೂಲ ಚೈತನ್ಯ ವಾದ ಪರಮಾತ್ಮನನ್ನು ಸೇರಲಿ, ದೇಹವು ಭಸ್ಮವಾಗಲಿಓ ಪರಮಾತ್ಮನೇ, ನಿನ್ನ ಮಹಿಮೆಯನ್ನು ಸ್ಮರಿಸುತ್ತೇನೆ  ಪ್ರಾಣವೇ ಮುಂತಾದ  ಎಲ್ಲಾ ತತ್ವಗಳೂ ಮೂಲ ತತ್ವಗಳಲ್ಲಿ ಸೇರಲಿ, - ಸೂಕ್ಷ್ಮ , ಕಾರಣ, ಸ್ಥೂಲ ಶರೀರಗಳು ಆಯಾ ತತ್ವಗಳಿಲ್ಲಿ ಸೇರಿ ಹೋಗಲಿ, ಆತ್ಮವು ಪರಮಾತ್ಮನಲ್ಲಿ ಸೇರಲಿ, ಪುನರ್ಜನ್ಮ ವಿಲ್ಲದ ಮೋಕ್ಷ ಪ್ರಾಪ್ತಿ ಯಾಗಲಿ ಎಂಬುದು ಸಾಧಕನ  ಆಶಯ. ಇದು ಸಾಂಪ್ರದಾಯಿಕ ಅರ್ಥ. ಆದರೆ ಇದಕ್ಕೆ ಬೇರೆ ರೀತಿಯಾದ ಅರ್ಥವನ್ನೇ ಮಾಡುವುದು ಸೂಕ್ತ.
 
         ಸಾಧಕನಿಗೆ ಸೋಹಮಸ್ಮಿ  ಅವನೇ ನಾನು ಎಂಬ ಅಪರೋಕ್ಷಾನುಭೂತಿ ಯಾದಾಗಲೇ , ಪರಮಾತ್ನನಲ್ಲಿ ಚಿತ್ತ ಲೀನವಾದಾಗಲೇ ದೇಹಭಾವ ನಶಿಸಿ ಹೋಗಿದೆ. ಸಾಧಕನು ಸಿದ್ಧನಾಗಿ ಜ್ಞಾನಾಗ್ನಿಯಿಂದ ಕರ್ಮ, ದೇಹ, ದೃಶ್ಯ ಜಗತ್ತು, ದಗ್ಧವಾಗಿ ಜೀವಿಸಿರುವಾಗಲೇ ಮೋಕ್ಷ ಪ್ರಾಪ್ತಿ ಯಾಗಿದೆ.  ಅವನು ಸಮಾಧಿ ಸ್ಥಿತಿಯಿಂದ ಎಚ್ಚರಾಗಿ ಈ ಜಗತ್ತಿನಲ್ಲಿದ್ದರೂ ಅದಕ್ಕೆ ಅಂಟಿಯೂ ಅಂಟದಂತಿರುವನು. ಅಪರೋಕ್ಷಾನುಭೂತಿಯ ಸ್ಥಿತಿಯನ್ನು ತಲುಪುವ ಸಾಧಕನ  ಚಿತ್ತವ್ಯಾಪರವನ್ನು ತಿಳಿಸಲು ಈ ಪ್ರಾರ್ಥನೆ  ಔಪಚಾರಿಕವಾಗಿ ಬಂದಿದೆ ಎಂಬುದು ನನ್ನ ಅಭಿಪ್ರಾಯ. ಕಾರಣ, ಸಾಧಕನು ಪೂರ್ಣ ಜ್ಞಾನ ಸ್ತಿತಿಗೆ ಹೋದಾಗ ಹಿಂದಿನ ನಾನು ಎಂಬ ಸಾಧಕ  ಒಳಗೇ ಸತ್ತು, ಅವನಿಗೆ ಹೊಸ ಹುಟ್ಟು ಆಗಿರುತ್ತದೆ. ಈ  ಪ್ರಾರ್ಥನೆ ಅಚಾನಕವಾಗಿ ತನ್ನೊಳಗೆ ತಾನಾಗಿ ಘಟಿಸಿ ಹೋಗಿರುತ್ತದೆ.  ಆದ್ದರಿಂದಲೇ ಮುಂದಿನ ಮಂತ್ರ ಬಂದಿದೆ; ಸಾಧಕನು ಸಾಂಪ್ರದಾಯಿಕ ಅರ್ಥದಂತೆ ದೇಹ ತ್ಯಾಗ ಮಾಡಿದ್ದರೆ ಮುಂದಿನ ಮಂತ್ರದ ಅಗತ್ಯ ಇರುತ್ತಿರಲಿಲ್ಲ.

           ಹೀಗೆ ಮಾಯೆಯಿಂದ ಕಳಚಿಕೊಂಡ ಜ್ಞಾನಿಯಾದ ಸಾಧಕ ಉಳಿದವರಿಗೆ ಮಾರ್ಗದರ್ಶನ ಮಾಡುವ ದೃಷ್ಟಿಯಿಂದಲೂ, ಲೋಕಸಂಗ್ರಹಕ್ಕಾಗಿಯೂ, ಪನಃ ಮಾಯೆಯೊಳಗೆ ಸಿಗದಂತೆ ಎಚ್ಚರ ವಹಿಸಲೂ, ಗುರು ಶಿಷ್ಯರೊಡಗೂಡಿ ಹೇಳುವ ಈ ಕೆಳಗಿನ ಮಂತ್ರದಿಂದ ಉಪನಿಷತ್ತು ಕೊನೆಗೊಳ್ಳುತ್ತದೆ.

ಮಂತ್ರ  ೧೮ :             ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ |
                     ವಿಶ್ವಾನಿ ದೇವ ವಯುನಾನಿ ವಿದ್ವಾನ್ ||
                     ಯುಯೋದ್ಧ್ಯಸ್ಮಜ್ಜುಹುರಾಣುಮೇನೋ |                    
                     ಭೂಯಿಷ್ಠಾಂತೇ  ನಮಃ ಉಕ್ತಿಂ ವಿಧೇಮ ||                

ಪದ್ಯ  ೧೮ ;        ಓ ಬೆಳಕೆ, ನಡೆಸೆಮ್ಮ ಸನ್ಮಾರ್ಗದಲಿ |
                     ಜಗದ ಜೀವನವು ಒಳಿತು ಕೆಡುಕುಗಳಾಗರವು ||
                     ವಿಶ್ವ ತತ್ವಜ್ಞನು ನೀನು, ದುರಿತವನು ದೂರವಿಡು |
                     ನಾವೆರಗುವೆವು ನೆಲಬಗ್ಗಿ ವಿನಯದಲಿ ನಿನಗೆ ||

(ಓ ಬೆಳಕೆ ನಡೆಸು ಎಮ್ಮ-ಎಮ್ಮನು-ನಮ್ಮನ್ನು, ಸನ್ಮಾರ್ಗದಲಿ , ಜಗದ ಜೀವನವು ಒಳಿತು ಕೆಡಕುಗಳ  ಆಗರವು,ವಿಶ್ವ ತತ್ವಜ್ಞನು ನೀನು, ದುರಿತವನು-ಕೆಟ್ಟದ್ದನ್ನು ದೂರವಿಡು, ನಾವು ಎರಗುವೆವು ನೆಲಬಗ್ಗಿ-ಸಾಷ್ಟಾಂಗ, ವಿನಯದಲಿ ನಿನಗೆ)

  ಅಗ್ನೇ  ಎಂಬುದನ್ನು  ಓ ಬೆಳಕೇ ಎಂದು ಅನುವಾದಿಸಿದೆ.  ಸಾಧಕನು ಅಮೃತದೆಡೆಗೆ ದೇಹಾತೀತನಾಗಿ ಹೋಗುವಾಗ ಮಾಡುವ ಪ್ರಾರ್ಥನೆ ಎಂದು ಅರ್ಥ ಮಾಡುತ್ತಾರೆ.
ಆದರೆ ಸಾಧಕ ಅದೇ ನಾನು ಎಂಬ ಜ್ಞಾನ ವಾದಮೇಲೆ ಮಾಡುವ ಸಾಮೂಹಿಕ ಪ್ರಾರ್ಥನೆ ಎನ್ನಬಹುದು.  ಜಗದ ಹಿತ ಸಾಧನೆಗ ಜ್ಞಾನಿಯಾದವನು ನೂರುಕಾಲ ಬಾಳಲು ತನ್ನನ್ನೂ ತನ್ನ ಜೊತೆಯಲ್ಲಿರುವವರನ್ನೂ ಇನ್ನು ಮುಂದೆಯೂ ಸನ್ಮಾರ್ಗದಲ್ಲಿ, ಸತ್ಯ ಧರ್ಮದ ಮಾರ್ಗದಲ್ಲಿ ನಡೆಸ ಬೇಕೆಂದು ಅಗ್ನಿಯನ್ನೇ ಶರೀರವಾಗಿ ಹೊಂದಿರುವ  ಅಥವಾ ಬೆಳಕಿನ ರೂಪವಾಗಿರುವ ಭಗವಂತನಿಗೆಮಾಡಿದ ಸಾಮೂಹಿಕವಾದ ಪ್ರಾರ್ಥನೆ ಇದು.  ವಿಶ್ವದ ಸಕಲ ತತ್ವಗಳನ್ನೂ ತಿಳಿದಿರುವ ಭಗವಂತನಿಗೆ  ಶರಣಾಗತಿಯ  ಸಾಷ್ಟಾಂಗ  ನಮಸ್ಕಾರ. ಭಕ್ತನು ಜ್ಞಾನಿಯಾದರೂ, ಪರಮಾತ್ಮನಲ್ಲಿ ಏಕೀಭಾವ ಹೊಂದಿದರೂ ಆತನು ಜಗದೀಶ್ವರನಾಗಲು ಸಾಧ್ಯವಿಲ್ಲ.
ಯಜ್ಞದ ಕೊನೆಯಲ್ಲಿ ಸಾಮೂಹಿಕವಾಗಿ ಈ ಪ್ರಾರ್ಥನೆ ಮಾಡುವುದು ಸಾಮಾನ್ಯವಾಗಿದೆ. ಕೊನೆಯ ಸಾಲನ್ನು ಎರಡು ಬಾರಿ ಹೇಳವುದು ವಾಡಿಕೆ. ಕೊನಯಲ್ಲಿ ಪುನಃ ಶಾಂತಿ ಮಂತ್ರ ವನ್ನು ಹೇಳಿ ಮಕ್ತಾಯ ಮಾಡುವುದು ಪದ್ಧತಿ.
  ( ಈಮಂತ್ರಗಳ ಮೊದಲ ದೃಷ್ಟಾರ ಶತರೂಪಾದೇವಿಯ ಪತಿಯಾದ ಋಷಿ ಸ್ವಾಯಂಭೂ ಮನುವೆಂದೂ, ನಂತರ ಅಥರ್ವಣ, ಯಾಜ್ಞವಲ್ಕ್ಯ ಕಣ್ವ, ಮಾಧ್ಯಂದಿನ ಮುನಿಗಳು  ಈ  ಮಂತ್ರಗಳ ಉಪದೇಶದರ್ಶನ ಪಡೆದರೆಂದು ಹೇಳುತ್ತಾರೆ. - ಬನ್ನಂಜೆ ಗೋವಿಂದಚಾರ್ಯರು)
                   


                     ಓಂ ಪೂರ್ಣಮದಃ ಪೂರ್ಣಮಿದಂ
                     ಪೂರ್ಣಾತ್ಪೂರ್ಣಮುದಚ್ಯತೇ |
              ಪೂರ್ಣಸ್ಯ ಪೂರ್ಣಮಾದಾಯ
                     ಪೂರ್ಣಮೇವಾವಶಿಷ್ಯತೇ ||
              ಓಂ  ಶಾಂತಿಃ  ಶಾಂತಿಃ  ಶಾಂತಿಃ
                           ****
       (೨೨-೦೯-೨೦೦೯/2-1-2012)

No comments:

Post a Comment